23/12/12

ಪುಟ್ಟಪ್ಪ ಎಂಬ ದೊಡ್ಡ ಬೆಟ್ಟ

ಕವಿಶೈಲದಲ್ಲಿ ಹೆಕ್ಕಿದ ಬೆಳಗಿನ ಬೆಟ್ಟದ ನೋಟ

ದೂರದೂರದ ಆಳದ ಕಣಿವೆಗಳಲ್ಲಿ ಟಿಸಿಲೊಡೆದು ಮಾರ್ದನಿಸುವ ನವಿಲುಗಳ ನಾಜೂಕು ದನಿ. ಪ್ರತಿ ಗಿಡಮರವನ್ನೂ ಬಳಸಿ-ಬಳಸಿ ಮೆತ್ತಗೆ ಮೈ ತಾಕುವ ಚುಂಬಕ ಗಾಳಿ. ನೇಸರನ ಉರಿಬಿಸಿಲನ್ನೂ ಸಹ್ಯಗೊಳಿಸುವ ಹಸುರು. ಹೆಪ್ಪುಗಟ್ಟಿದ ಮೌನದಲ್ಲೂ ಮೆಲುಗಾಳಿಗೆ ಮನಸೋತು ತಟಪಟನೆ ಸದ್ದು ಪಸರಿಸುವ ಬಿದಿರು...ಕವಿಶೈಲಕ್ಕೆ ಮನಸೋಲದಿರಲು ಇನ್ನೇನು ಬೇಕು. ನನಗೆ ಕುವೆಂಪುಗಿಂತಲೂ ಅವರನ್ನು ರೂಪಿಸಿದ, ಅವರೊಳಗೆ ಅನನ್ಯ ಆಲೋಚನೆಗಳನ್ನು ಬಿತ್ತಿದ ಪರಿಸರದ ಬಗ್ಗೆಯೇ ತೀರದ ಬೆರಗು. ಪುಟ್ಟಪ್ಪ ಎಂಬ ಮನುಷ್ಯನಲ್ಲಿ ಪದದ ಫಲವತ್ತತೆ ತುಂಬಿದ, ಹದವರಿತು ಬದುಕುವುದನ್ನು ಕಲಿಸಿದ ಮಲೆನಾಡನ್ನು, ಅದರ ರಮಣೀಯತೆಯನ್ನು ಮನಸಾರೆ ದಿಟ್ಟಿಸದೆ, ಅದಕ್ಕೆ ಮನಸೋಲದೆ ಅವರ ಸಾಹಿತ್ಯದ ಸೌದರ್ಯವನ್ನು ಸ್ವಾದಿಸುವುದು ಅಸಾಧ್ಯ.

ಕುವೆಂಪು ನನಗೆ ಮುಖ್ಯವೆನಿಸೋದು ಅವರ ಅಪಾರ ಸಾಹಿತ್ಯ ರಾಶಿಯಿಂದಲ್ಲ, ಬದುಕಿನಿಂದ. ಜೊತೆಗೆ ಅಷ್ಟೆಲ್ಲವನ್ನೂ ಬರೆಯದಿದ್ದರೆ ಅವರ ಬದುಕೇ ಅಪೂರ್ಣವಾಗುತ್ತಿತ್ತೇನೋ ಎಂಬಷ್ಟು ತೀವ್ರ ಸಂವೇದನೆಯನ್ನು ಒಳಗೊಂಡ ಅಭಿವ್ಯಕ್ತಿಯಿಂದ. ಏಕೆಂದರೆ ಅಭಿವ್ಯಕ್ತಿ ಮನುಷ್ಯನೊಳಗೆ ಜೀವಪರ ತುಡಿತಗಳನ್ನು ಜೀವಂತವಿಡುತ್ತದೆ. ಅದೆಷ್ಟೇ ಚಂದ ಬರೆದರೂ ತೃಪ್ತಿಯೆಂಬ ಕುಡಿಕೆಯ ತಳಭಾಗದಲ್ಲಿ ಅತೃಪ್ತಿಯ ಶಾಸ್ವತ ರಂಧ್ರವಿರಿಸುತ್ತದೆ. ಒಂದೊಂದು ಉತ್ತಮ ಬರಹವೂ ಮನುಷ್ಯಸಹಜ, ವಯೋಸಹಜ ಸಣ್ಣತನಗಳನ್ನು ನೀಗುತ್ತಾ ಬರುತ್ತದೆ. ಈ ಮಾತು ಇವತ್ತಿನ ಹಲವು ಬರಹಗಾರರಿಗೆ ಅನ್ವಯಿಸಲಾಗದು ಎಂಬುದು ವಿಪರ್ಯಾಸ.

ಬರಹ ಬಲ್ಲ ಎಲ್ಲರಿಗೂ ಒಂದು ಸತ್ಯ ಅರಿವಿಗೆ ಬಂದಿರುತ್ತದೆ. ಅದೇನೆಂದರೆ ಕನಸಲ್ಲದ ಲೋಕವೊಂದನ್ನು ಕಟ್ಟಿಕೊಡುವುದು ತುಂಬಾನೇ ಕಷ್ಟದ ಕೆಲಸ. ಅದೇ ಕನಸನ್ನು ಮನಸ್ಸಿಗೆ ತೋಚಿದಂತೆ ಕಡೆದು ನಿಲ್ಲಿಸಿಬಿಡಬಹುದು. ಹೆಚ್ಚೆಂದರೆ ಕನಸನ್ನು ಕಂಡಂತೆ ಕಟ್ಟಕೊಡಲಾಗಲಿಲ್ಲ ಎಂಬ ಕೊರಗು ಬರಹಗಾರನಲ್ಲಿ ಉಳೀಬಹುದು. ಆದರೆ ಕನಸಲ್ಲದ ಲೋಕ ತೆರೆದಿಡುವಾಗ ಸಾವಿರಾರು ಕಣ್ಣಗಳೂ ಆ ಲೋಕ ಕಂಡಿರುತ್ತವೆ ಎಂಬ ಎಚ್ಚರಿಕೆಯೂ ಕೆಲಸ ಮಾಡುವುದುಂಟು. ಕುವೆಂಪು ತನ್ನ ಬರಹದುದ್ದಕ್ಕೂ ಕಟ್ಟಿಕೊಟ್ಟ ಮಲೆನಾಡು ಕನಸಲ್ಲದ ಕಲಾಕೃತಿ. ಅವರ ಕಾದಂಬರಿಗಳು ಮಲೆನಾಡನ್ನು ಕಥಾಹಂದರದೊಳಕ್ಕೆ ತಂದುಕೊಂಡು ಮಾತನಾಡಿದರೆ, ಪ್ರಬಂಧಗಳು ನೇರವಾಗಿ ಅನುಭವಸಹಿತ ಮಾತನಾಡುತ್ತವೆ. ಆದರೆ ಕವಿತೆಗಳು ಮಲೆನಾಡನ್ನು ಮೀರಿ ಬೆಳೆದಂಥವು. ಮಲೆನಾಡಿನ ಹೆಜ್ಜೆಯಲ್ಲಿ ನಿಂತೂ ಅನಂತವನ್ನು ಜಪಿಸಿದಂಥವು. ಕಾವ್ಯವೆಂದರೆ ಅದೇ ತಾನೇ...

ಕುವೆಂಪು ಅಂದೊಡನೆಯೆ ಧುತ್ತೆಂದು ಕಾಡುವಂಥದ್ದು ಅವರ ಆಲೋಚನೆಯ ಎರಡು ತುದಿಗಳಾದ ಮಲೆನಾಡು ಮತ್ತು ವಿಶ್ವಮಾನವ ಸಂದೇಶ. ವ್ಯಕ್ತಿಯೊಬ್ಬ ತಾನು ತಾನಾಗಿಯೇ ಇದ್ದುಕೊಂಡೂ ಇನ್ನೇನೋ ಆಗುತ್ತಾನೆ ಎನ್ನುತ್ತಾರಲ್ಲ ಹಾಗೆ ಇದು. ಬಹುಶಃ ಕುವೆಂಪು ಬದುಕಿನ ಈ ಚಿಂತನೆಯೇ ನನ್ನನ್ನೂ ಸೇರಿಸಿ ಹಲವರಿಗೆ ಒಗಟಾಗಿ ಕಂಡಿರಬೇಕು. ರಾಜಾಶ್ರಯದ ಸಕಲ ಸೌಭಾಗ್ಯಗಳನ್ನು ಕಂಡಿದ್ದರೂ ಬನವಾಸಿಯಲ್ಲೇ ಹುಟ್ಟಬೇಕೆಂದು ಪಂಪ ಕನವರಿಸಿದ್ದು, ನೊಬೆಲ್ ಪುರಸ್ಕಾರ ಸಿಕ್ಕ ನಂತರವೂ ಎಳ್ಳಷ್ಟೂ ಕಡಿಮೆಯಾಗದ ರವೀಂದ್ರರ ಕೊಲ್ಕತ್ತಾ ವ್ಯಾಮೋಹ, ಚಿಲಿಯ ಸಂತ ನೆರೂಡಾ ಊರಿಂದ ದೂರ ಹೋಗಿ ಗುಡಿಸಲು ಕಟ್ಟಿಕೊಂಡು ಬದುಕಿದ್ದು, ರಷ್ಯಾದ ಪರಿಸರದ ಬಗೆಗೆ ಟಾಲ್'ಸ್ಟಾಯ್'ನ ನಂಬುಗೆ ಹಾಗೂ ಮ್ಯಾಕ್ಸಿಂಗಾರ್ಕಿಯ ತುದಿಮೊದಲಿರದ ಜೀವನಪ್ರೀತಿ...ಹೀಗೆ ಇಂತವೇ ಒಗಟುಗಳು ಸಾಕಷ್ಟಿವೆ. ಇಂತೆಲ್ಲಾ ಒಗಟುಗಳಿಗೆ ಅವರ ಬರಹಗಳೇ ಉತ್ತರ ಹೆಕ್ಕಿ ಕೊಡುತ್ತವೆ. ಕಾಲು ನಿಂತ ನೆಲದ ಧೂಳು ಅಂಟಿಸಿಕೊಂಡಿದ್ದರೂ ಭಾವ ವಿಶ್ವಮುಖಿಯಾಗಿರಬೇಕೆಂಬ ನಿಲುವು ಕುವೆಂಪು ಅವರದಾಗಿತ್ತು. ಇದನ್ನು ಒಂದೇ ಪದದಲ್ಲಿ ಹಿಡಿದು ಕೊಡುವುದಾದರೆ-'ಮಾನವೀಯತೆ'. ಪಂಪ ಇದನ್ನೇ 'ಮನುಜಕುಲ ತಾನೊಂದೆ ವಲಂ' ಎಂದಿದ್ದು.

ಕುವೆಂಪು ಅವರನ್ನು ನೋಡಿದರೆ ಎಲ್ಲರೂ ಸಾಮಾನ್ಯವಾಗಿ ಭಾವಿಸುವಂತೆ ಯಾರಿಗೂ ನಿಲುಕದಂತಹ ವ್ಯಕ್ತಿ ಅಂತ ನನಗನ್ನಿಸುವುದಿಲ್ಲ. ಸಾಮಾನ್ಯನನ್ನೂ ಮುಟ್ಟುವಂತಹ ಸರಳ ವ್ಯಕ್ತಿತ್ವವದು. ನಾನಂದುಕೊಂಡಂತೆ ಎತ್ತರದ ವ್ಯಕ್ತಿ ಅಂದ್ರೆ ಸುಲಭವಾಗಿ ಅರ್ಥವಾಗದ್ದಲ್ಲ, ಯಾರು ಬೇಕಾದರೂ ಅನುಸರಿಸಿ ನಡೆಯಬಲ್ಲದ್ದು. ಅಸಲಿಯಾಗಿ ಬದುಕಿನ ಸಾರ್ಥಕತೆ ಇರೋದು 'ನೋಡು, ನನ್ನಂತೆ ನೀನೂ ಬದುಕಬಹುದು' ಎಂದು ಪ್ರೇರೇಪಿಸುವುದರಲ್ಲಿ. ಮಲೆನಾಡಿನ ಸಾಮಾನ್ಯನೊಬ್ಬ ಕುವೆಂಪು ಯಾರೆಂದು ಗೊತ್ತಿಲ್ಲದೆಯೂ ಅವರಷ್ಟೇ ಜೀವನಪ್ರೀತಿಯಿಂದ ಬದುಕಬಲ್ಲ. ಆದ್ದರಿಂದಲೇ ಕುವೆಂಪು ಅವರದ್ದು ಅಸಾಧ್ಯ ಅನ್ನಿಸಿಬಿಡುವ ಬದುಕಲ್ಲ. ಏಕೆಂದರೆ ಅವರ ಬದುಕಿನ ಪರಿಧಿಯೊಳಗೆ ಮೊಂಡುತನಗಳಿಲ್ಲ. ಆದರೆ ನಮಗೆ ಲಂಕೇಶ್ ಇಲ್ಲವೇ ತೇಜಸ್ವಿಯವರ ಬದುಕು ಅಸಾಧ್ಯ ಅನ್ನಿಸೋದು ಸಹಜ. ರನ್ನನ ಕಾವ್ಯವನ್ನು ಪರೀಕ್ಷೆಗೊಳಪಡಿಸುವವರಿಗೆ ಮಾತ್ರವಲ್ಲ, ಲಂಕೇಶ್ ಅಥವಾ ತೇಜಸ್ವಿಯವರಂಥ ಸುಲಭಸಾಧ್ಯವಲ್ಲದ ಬದುಕನ್ನು ತನ್ನದಾಗಿಸಿಕೊಳ್ಳುವುದಕ್ಕೂ ಎಂಟೆದೆ ಬೇಕು.

ಜಗತ್ತಿನ ಜೀವವಿರುವುದು ಅದರ ಒಟ್ಟುಪ್ರಜ್ಞೆಯಲ್ಲೇ. ಪಕಳೆಗಳನ್ನಾಗಿಸಿ ಬಿಡಿಸುತ್ತಾ ಹೋದರೆ ಕಡೆಗೆ ಏನೂ ದಕ್ಕುವುದಿಲ್ಲ ಎಂಬುದಕ್ಕೆ ಕುವೆಂಪು ಒಟ್ಟು ಸಾಹಿತ್ಯವೇ ಒಂದು ಮಹೋಪಮೆ. ಪ್ರಕೃತಿ ಮತ್ತು ಮಾನವ ಸಮಾಜ ತಾನೇ ಸೃಷ್ಟಿಸಿಕೊಂಡ ವಾಸ್ತವಗಳ ನಡುವೆಯೂ ಕಟ್ಟಿಕೊಳ್ಳಬಹುದಾದ ಚಂದದ ಬದುಕಿನ ಒಳಗುಟ್ಟುಗಳನ್ನು ಅದು ಪಿಸುಗುಡುತ್ತದೆ. ಅಂಥದ್ದೊಂದು ಜೀವಪರ ಉಮೇದು ಅವರ ಬರಹಕ್ಕಿದೆ. ಆದರೆ ನಾವು ಹೆಚ್ಚು 'ನಾಗರಿಕ'ರಾದಂತೆಲ್ಲಾ ಅವರ ಬದುಕನ್ನೂ ಅವರನ್ನೂ ಬೇರ್ಪಡಿಸಲಾಗದಂತೆ ಬದುಕಿದ ಎಲ್ಲರನ್ನೂ ಮಹಾತ್ಮರ ಪಟ್ಟಿಗೆ ಸೇರಿಸಿದ್ದೇವೆ. ಅವರನ್ನೂ ಅವರ ಬದುಕನ್ನೂ ಬೇರೆಬೇರೆಯಾಗಿಸಿ ದೇವರುಗಳನ್ನಾಗಿಸಿದ್ದೇವೆ. ಹೆಚ್ಚೆಂದರೆ ಫೋಟೋಗೆ ಫ್ರೇಮ್ ಹಾಕಿಸಿಟ್ಟು ಜನುಮದಿನದಂದು ತೆಗೆದು ಧೂಳು ಒರೆಸಿ ಒಂದಷ್ಟು ಚಪ್ಪಾಳೆ ಹೊಡೆದು ನಿರುಮ್ಮಳರಾಗುತ್ತೇವೆ. ಜೊತೆಗೆ ಹೀಗೆ ಚಂದದ ಬದುಕು ಕಟ್ಟಿಕೊಂಡವರಿಗೆ ಅಥವಾ ಸಮಾಜದ ಒಳಿತಿಗಾಗಿ ತುಡಿದವರಿಗೆ ಅತಿಮಾನುಷ ಶಕ್ತಿಯಿತ್ತೆಂದು ಭಾವಿಸುವ ಮಹಾನುಭಾವರಿಗೇನೂ ಕೊರತೆಯಿಲ್ಲ. ಬುದ್ಧನಿಂದ ಬಸವನವರೆಗೆ, ಪಂಪನಿಂದ ಕುವೆಂಪುವರೆಗೆ ಮಹತ್ತನ್ನು ಸಾಧಿಸಿದ ಎಲ್ಲರಿಗೂ ಇದೇ ಸದ್ಗತಿಯೊದಗಿದೆ. ಇದು ಕೇವಲ ನಮ್ಮ ನಾಡಿಗೆ ಅಥವಾ ಸಾಹಿತ್ಯ ಕ್ಷೇತ್ರಕ್ಕೆ ಮಾತ್ರವೇ ಸೀಮಿತವಾಗಿಲ್ಲ. ನಮಗೆ ಗೊತ್ತಿರಬಹುದಾದ ಎಲ್ಲ ದೇಶ ಹಾಗೂ ಕಾಲಘಟ್ಟಗಳ ಅಪೂರ್ವ ಚಿಂತಕರದ್ದೂ ಇದೇ ಪಾಡು. ಸರಿ ಮುಂದೇನು ಎಂಬ ಕೇಳ್ವಿ ನಿಮ್ಮದಾದರೆ ಇದೋ ಅಡಿಗರ ಭರತವಾಕ್ಯ...

'ಅಂದು ರಸಋಷಿಗಳೊನಿಬರಬರೆದ ಕಾವ್ಯರಸ

ಸಿಂಧುವಿನೊಳಗೆ ಮಿಂದು ಮೆರುಗುಗೊಳಲಿ..

ಅಂದಿನವರಾಂತರ್ಯದೊಂದು ಶಾಂತಿಯ ಕಾಂತಿ

ಇಂದೆಮ್ಮ ಕೃತಿಗಳಲ್ಲಿ ಮಾರ್ಪೊಳೆಯಲಿ'

22/12/12

ಮಂಡಕ್ಕಿಯಡಿ ಇದ್ದ ಪೇಪರ್ರು ಮತ್ತು ನನ್ನೆಸ್ರು














ಮಾರುತಿ ಮೇಸ್ಟ್ರು, ಮುತ್ತಯ್ಯ ಮೇಸ್ಟ್ರು, ಗುರುನಾಥ್ ಮತ್ತು ತಿಪ್ಪೇಸ್ವಾಮಿ ಸರ್ ಜೊತೆ ನಾನೂ ಹೆಜ್ಜೆ ಹಾಕಿದ್ದೆ. ಅವತ್ತಿನ ಕ್ಲಾಸುಗಳನ್ನು ಮುಗಿಸಿಕೊಂಡು ಮೇಸ್ಟ್ರ ರೂಮಿನಲ್ಲಿ ಹಲವು ಸುತ್ತಿನ 'ಪದ್ಯದ್ಹರಟೆ'ಯನ್ನೂ ಮುಗಿಸಿಕೊಂಡ ನಮ್ಮ ಗುಂಪು ಹೊರಟಿದ್ದಿದ್ದು ಗಣೇಶ್ ಭವನದ ಕಡೆ. ಅವರೆಲ್ಲಾ ಪಾಠ ಹೇಳುವುದನ್ನು ಮುಗಿಸಿಕೊಂಡೂ, ನಾನು ಪಾಠ ಕೇಳುವುದನ್ನು ಮುಗಿಸಿಕೊಂಡೂ ಬಂದುದಾಗಿತ್ತು.

ಗಣೇಶ್ ಭವನ ಸ್ಟಾಪಿನೆದುರು ಒಂದು ಪುಟಾಣಿ ಹೋಟೆಲ್. ಎಲ್ರಿಗೂ ಅಲ್ಪಸ್ವಲ್ಪ ಹಸಿವಾಗಿತ್ತು. ಆದ್ರೆ ಅಲ್ಲಿದ್ದದ್ದು ಮಂಡಕ್ಕಿ, ಬೋಂಡಾ ಮಾತ್ರ. ಆದಂಗಾಗ್ಲಿ ಅಂತ ಜೈ ಅಂದ್ಮೇಲೆ ಎಲ್ರ ಎದುರೂ ಟೇಬಲ್'ನ ಮೇಲೆ ಒಂದು ಮಂಡಕ್ಕಿ ಗುಡ್ಡೆ ಮತ್ತು ಎರಡೆರಡು ಮೆಣಸಿನಕಾಯಿ ಬೋಂಡಾಗಳು ಕಾಣಿಸಿಕೊಂಡ್ವು. ದೊಡ್ಡೋರ ಮಾತು ಮುಂದುವರಿದಿತ್ತು. ನಾನು ಆಗಾಗ ಮಾತಿನ ಹೊಗ್ಗರಣೆ ಹಾಕುತ್ತಾ, ಹ್ಞಾಂ..ಹ್ಞೂಂ..ಎನ್ನುತ್ತಾ ಮಂಡಕ್ಕಿ ಮೆಲ್ಲುತ್ತಿದ್ದೆ. ನಮ್ಮ ಮಂಡಕ್ಕಿ ಭೋಜನ ಅರ್ಧ ಮುಗೀತು ಅನ್ನುವ ಹೊತ್ತಿಗೆ ಹೋಟೆಲಿನವನು ಮಂಡಕ್ಕಿ ಕೊಟ್ಟಿರೋದು 'ಕಾಲೇಜುರಂಗ'ದ(ಕನ್ನಡಪ್ರಭ) ಶೀಟ್ ಹರಿದು ಅನ್ನೋದು ನಂಗೆ ಗೊತ್ತಾಗಿಹೋಗಿತ್ತು. ಹೋಟೆಲಿನವನ ಮೇಲೆ ಸಿಟ್ಟು ಬಂತಾದರೂ ಪಾಪ..ಅವನಿಗೇನು ಗೊತ್ತು, ಅದು ಸಾವಿರಾರು ಹುಡುಗ-ಹುಡುಗಿಯರ ಕನಸಿನ ರೂಪು ಅಂತ ನಂಗೆ ನಾನೇ ಸಮಾಧಾನ ಮಾಡಿಕೊಂಡೆ.

ಇಷ್ಟೆಲ್ಲಾ ತಲೆಯೊಳಗೆ ಬಂದು ಹೋಗೋದ್ರೊಳಗೆ ಮೇಸ್ಟ್ರುಗಳ ಮಂಡಕ್ಕಿ ಮುಗಿದು, ಅವರಿಗೆ ಮಂಡಕ್ಕಿ ಸಿಕ್ಕಿದ್ದ ಪೇಪರನ್ನೇ ಮಡಿಚಿ ಕೈ ಒರೆಸಿಕೊಂಡು ಬಿಸಾಡುವ ಸಿದ್ಧತೆ ನಡೆದಿತ್ತು. ನಾನೂ ಹಾಗೇ ಮಾಡಬೇಕೆಂದುಕೊಂಡು ಉಳಿದಿದ್ದ ಮಂಡಕ್ಕಿಯನ್ನು ಸರಸರ ಸುರಿದುಕೊಳ್ಳತೊಡಗಿದೆ. ಮಂಡಕ್ಕಿ ಅರುಗಾಗುತ್ತಾ ಹೋದಂಗೆ ಅಲ್ಲಿ ಕಂಡ ಚಿತ್ರಣಕ್ಕೆ ಥಟಕ್ಕನೆ ಕಣ್ಣಗಲಿದವು. ಅದು ನಾ ಬರೆದ ಬರಹಾನೇ ಇರ್ಬೋದಾ ಅನ್ನಿಸ್ತು..ಹೌದು...'ಪುಟ್ಟಪ್ಪ ಎಂಬ ದೊಡ್ಡ ಬೆಟ್ಟ'...ಅಂತ ಕುವೆಂಪು ಬಗ್ಗೆ ನಾನೇ ಬರ್ದಿದ್ದದು. ಹುಡುಕಿದೆ, ಬೋಂಡಾದ ಎಣ್ಣೆ ಹನಿದಿದ್ದ ಜಾಗದಲ್ಲಿ ನನ್ನ ಹೆಸರು ತೇಲಾಡುತ್ತಿತ್ತು. ಬಡ್ಡೀಮಕ್ಳು ಅಂತ ಬಯ್ಬೇಕು ಅನ್ಸಿದ್ರೂ, ಆಗಷ್ಟೇ ಊದಿಗಡ್ಡಿ ಹಚ್ಚಿ ನಾವಿದ್ದ ಕೋಣೆಗೆ ಘಮ ತುಂಬಿದ್ದ ಹೋಟೆಲಿನವನ ಪಾಪದ ಮುಖ ನೋಡಿ ಅದೂ ಕರಗಿಹೋಯ್ತು.

17/12/12

ಒಳಗುಳಿದ ಮಾತಿನ ನೆಂಪು

ಕನ್ನಡ ಸಂಘದಿಂದ ಬಹುಮಾನ ಪಡೆಯಲೆಂದು ಕ್ರೈಸ್ಟ್ ಕಾಲೇಜಿಗೆ ಎಡತಾಕುವಾಗ ಕಳೆದ ಐದು ವರ್ಷಗಳಲ್ಲಿ ಕಿವಿಗೆ ಬಿದ್ದ ಗುಂಯ್'ಗುಡುವ ಕೆಲವು ಮಾತುಕಥೆಗಳು....

"ಬಂದ್ರಾ ನಾಗರಾಜ್..ಪ್ರಯಾಣ ಹೇಗಾಯ್ತು..ದಾರಿ ಗೊತ್ತಾಯ್ತು ತಾನೇ, ಏನೂ ಸಮಸ್ಯೆ ಆಗ್ಲಿಲ್ವಲ್ಲ..?" (ಕನ್ನಡ ಸಂಘದ ಸಂಚಾಲಕಿ ಡಾ.ರತಿ ಮೇಡಮ್ ಮೊದಲ ವರ್ಷದ ಸಮಾರಂಭ ಶುರುವಾಗುವ ಮುಂಚಿನ ಕುಶಲೋಪರಿಯಲ್ಲಿ ಕೇಳಿದ್ದು)

"ಬರೀತಾ ಇರಯ್ಯ, ಪ್ರಶಸ್ತಿ ಬಂತು ಅಂತ ಬರಿಯೋದ್ ಬಿಟ್ಬಿಡ್ಬೇಡ..."(ಬಹುಮಾನ ಬಂದ ಮೊದಲ ವರ್ಷದ ಸಮಾರಂಭದಲ್ಲಿ ಅತಿಥಿಯಾಗಿ ಬಂದಿದ್ದ ಜಿ.ವೆಂಕಟಸುಬ್ಬಯ್ಯನವ್ರು ಪುಸ್ತಕಗಳನ್ನು ಕೊಡ್ತಾ ಹೇಳಿದ್ದು)

"ಚೆನ್ನಾಗಿದೆ ನಿಮ್ 'ಗಾಳಿದೀಪ' ಪದ್ಯ..ಇನ್ನೂ ಚೆನ್ನಾಗ್ ಬರೀರಿ..."(ತೀರ್ಪುಗಾರರಾಗಿದ್ದ ಚಿಂತಾಮಣಿ ಕೊಡ್ಲೆಕೆರೆ ನನ್ ಕವಿತೆ ಬಗ್ಗೆ ಹೇಳಿದ್ದು)

"ನಿಮ್ಮನ್ನೆಲ್ಲೋ ನೋಡಿದ ಹಾಗಿದ್ಯಲ್ಲ...?!"(ಬಹುಮಾನ ಕೊಡುತ್ತಾ ಹೆಚ್.ಎಸ್.ವೆಂಕಟೇಶಮೂರ್ತಿ ಅನುಮಾನಿಸಿದ್ದು...ನೀನಾಸಂನ ಸಂಸ್ಕೃತಿ ಶಿಬಿರದಲ್ಲಿನ ಒಂದು ರಾತ್ರಿ ನಡೆದ ಅನೌಪಚಾರಿಕ ಚರ್ಚೆಯಲ್ಲಿ ಕವಿತೆಯ ಕುರಿತು ಮನದಣಿಯೆ ಕೇಳ್ವಿ ಕೇಳಿದ್ದೆ ಅವರಿಗೆ!)

"ನಾವು ಇನ್ನೊಂದೆರಡು ಸಾಹಿತ್ಯ ಸ್ಪರ್ಧೆ ಮಾಡಿದ್ರೆ ನಾಗರಾಜ್ ಅದ್ರಲ್ಲೂ ಬಹುಮಾನ ತಗೋತಿದ್ರೇನೋ ಒಟ್ಟಿಗೇ..."(ಕ್ರೈಸ್ಟ್ ಕನ್ನಡ ವಿಭಾಗದ ಶಿವಪ್ರಸಾದ್ ಸರ್ ಅವ್ರ ಉದ್ಗಾರ- ಕಥೆ, ಕವಿತೆ ಎರಡೂ ಒಟ್ಟಿಗೇ ಬಹುಮಾನಕ್ಕೆ ಆಯ್ಕೆಯಾಗಿದ್ದಕ್ಕೆ)

ಕಾಡುವ ಐದು ವರ್ಷದ ಅಧ್ಯಾಯ

ಚಿ.ಶ್ರೀನಿವಾಸರಾಜು
ಡಿಗ್ರಿಯಲ್ಲಿ ಓದುತ್ತಿದ್ದ ಮೊದಲ ವರ್ಷ. ವಿಜಯ ಕರ್ನಾಟಕದಲ್ಲಿ 'ಕನ್ನಡದ ಕಣ್ಮಣಿಗಳು' ಅಂತಲೇನೋ ಒಂದು ಬರಹ ಸರಣಿ ಶುರುವಾಗಿತ್ತು. ಅದರಲ್ಲೊಮ್ಮೆ ಚಿ.ಶ್ರೀನಿವಾಸರಾಜು ಅವ್ರ ಬಗ್ಗೆ ಪರಿಚಯಾತ್ಮಕ ಲೇಖನವೊಂದು ಕಾಣಿಸಿಕೊಂಡಿತ್ತು. ಆ ಲೇಖನ ಬರುವ ಮುನ್ನವೇ ಚಿ.ಶ್ರೀನಿವಾಸರಾಜು ಹೊರಟುಹೋಗಿಬಿಟ್ಟಿದ್ರು. ನನಗಾಗಲೇ ಕ್ರೈಸ್ಟ್ ಕಾಲೇಜಿನ ಕವನ ಸ್ಪರ್ಧೆಯಲ್ಲಿ ನನ್ನ ಕವಿತೆ ಬಹುಮಾನ ಗಳಿಸಿದ ಸುದ್ದಿ ಸಿಕ್ಕಿತ್ತು. ಯುವ ಬರಹಗಾರರ ಬಗ್ಗೆ ಅಂಥದ್ದೊಂದು ಕನಸು ಇಟ್ಕೊಂಡಿದ್ದ ಮನುಷ್ಯನನ್ನು ನಾ ಮೊದಲ ಸಾರಿ ಇನ್ನೇನು ಭೇಟಿಯಾಗಬೇಕಿತ್ತು ಅನ್ನುವಷ್ಟರಲ್ಲೇ ಅವರು ಡಿಸೆಂಬರ್ ಕಡೇ ವಾರದಲ್ಲಿ ಇಲ್ಲವಾಗಿದ್ದರು. ಲೇಖನ ಓದಿ ಮುಗಿಸಿದಾಗ ಕಣ್ಣಂಚು ಒದ್ದೆಯಾಗಿತ್ತು.
* * * * *
ಇಷ್ಟೊತ್ತಿಗೆ ನನ್ನ ಬೊಗಸೆಯಲ್ಲಿ ಕ್ರೈಸ್ಟ್ ಕಾಲೇಜಿನ ಕನ್ನಡ ಸಂಘದಿಂದ ಬಂದಿರುತ್ತಿದ್ದ ಪತ್ರ ಇರುತ್ತಿತ್ತು. ಅದರಲ್ಲಿ ನನ್ನ ಕವಿತೆಯೋ ಕಥೆಯೋ ಪ್ರಶಸ್ತಿಗೆ ನಿಕ್ಕಿಯಾಗಿರುತ್ತಿತ್ತು. ನಾನದನ್ನು ಮೊದಲ ಬಾರಿಗೆ ರೆಕ್ಕೆ ಬಿಚ್ಚಿದ ನವಿಲನ್ನು ಕಂಡ ಮಗುವಿನಂತೆ ಕಣ್ಣರಳಿಸುತ್ತಾ, ತಡವಿ ನೋಡುತ್ತಾ, ನನ್ನದೇ ಹೆಸರಿನ ಒಂದೊಂದೇ ಅಕ್ಷರಗಳನ್ನು ಮೆತ್ತಗೆ ಓದುತ್ತಾ ಆನಂದಿಸುತ್ತಲಿರುತ್ತಿದ್ದೆ.

ಕಳೆದ ಐದು ವರ್ಷಗಳಿಂದಲೂ ಡಿಸೆಂಬರ್'ನಲ್ಲಿ ಈ ಮನಸ್ಥಿತಿ ನನ್ನೊಳಗೆ ಸೆರೆಹೊಡೆದಿರುತ್ತಿತ್ತು. ವರ್ಷವಿಡೀ ಮನಸ್ಸಿಗೆ ಎಷ್ಟೇ ವೇದನೆಯಾಗಿದ್ದರೂ, ಎಂಥದ್ದೇ ಸಂಕಷ್ಟಗಳನ್ನು ಎದುರಿಸಿದ್ದರೂ ಡಿಸೆಂಬರ್ ಬಂತೆಂದರೆ ಅದೆಲ್ಲವೂ ಮಂಗಮಾಯ. ಜನವರಿಯಲ್ಲಿ ನಡೆಯಲಿರೋ ಪ್ರಶಸ್ತಿ ಪ್ರದಾನ ಸಮಾರಂಭದ ಕನಸು ಕಾಣುತ್ತಾ ಕಾಲ ಕಳೆದದ್ದೇ ಗೊತ್ತಾಗುತ್ತಿರಲಿಲ್ಲ. ನನ್ನ ಡಿಗ್ರಿ ಮತ್ತು ಮಾಸ್ಟರ್ ಡಿಗ್ರಿ ಜೀವನದ ಐದೂ ವರ್ಷ ನಾನೀ ಅನನ್ಯ ಖುಷಿಯನ್ನು ಅನುಭವಿಸಿದ್ದೆ. ಅತ್ತಲಿಂದ ನನ್ನ ಕವಿತೆಯೂ, ಕಥೆಯೂ ಇರುತ್ತಿದ್ದ ಬಹುಮಾನಿತ ಪುಸ್ತಕವನ್ನು ನನ್ ಮೇಸ್ಟ್ರುಗಳಿಗೆ, ನಮ್ ಪಟಾಲಂನ ಹಿರಿ-ಕಿರಿಯ ಗೆಳೆಯರಿಗೆ ಹೆಮ್ಮೆಯಿಂದ ಹಂಚುತ್ತಿದ್ದೆ.
* * * * *
ಆದರೆ ಈ ವರ್ಷ ಅಂಥದ್ದೊಂದು ಖುಷಿಗೆ ನಾ ಒಳಗಾಗಿಲ್ಲ. ಏಕೆಂದರೆ ಕ್ರೈಸ್ಟ್ ಕನ್ನಡ ಸಂಘದ ಸ್ಪರ್ಧೆಗಳೇನಿದ್ರೂ ವಿದ್ಯಾರ್ಥಿಗಳಿಗೆ ಮಾತ್ರ. ನಾನೀಗ ವಿದ್ಯಾರ್ಥಿಯಲ್ಲ. ಕಳೆದ ಐದೂ ವರ್ಷ ಕನ್ನಡ ಸಂಘದಿಂದ ಬಂದ ಫಲಿತಾಂಶದ ಪತ್ರಗಳು, ನಾ ಬಹುಮಾನ ಪಡೆಯುವಾಗ ಯಾರೋ ಕ್ಲಿಕ್ಕಿಸಿದ ಫೋಟೋಗಳು, ಪುಸ್ತಕದ ಅಪ್ಪುಗೆಯೊಳಗೆ ಬಂಧಿಯಾದ ನನ್ನ ಕವಿತೆ-ಕಥೆಗಳು ಎಲ್ಲವನ್ನೂ ಹರವಿಕೊಂಡು ಕುಂತಿದ್ದೇನೆ. ಬದುಕಿನ ಮಹತ್ವದ ಅಧ್ಯಾಯವೊಂದು ಮುಕ್ತಾಯ ಕಂಡಂತೆ ಭಾಸವಾಗಿ, ಕಣ್ಣಂಚಲ್ಲಿ ತೇವ ಪಸರಿಸಿ ಎಲ್ಲವೂ ಮಂಜು-ಮಂಜು....