3/11/12

ಓಎಲ್'ಎನ್ ಹೇಳಿದ ಒಂದು ಗುಟ್ಟು...

ಪ್ರಿಯ ನಾಗರಾಜ್,
ನೋಡಿದೆ. ಚೆನ್ನಾಗಿದೆ ಅನ್ನುವುದು ಉಪಚಾರದ ಮಾತು. ಹೀಗೇ ಆಯಾ ಕ್ಷಣದ ಭಾವಗಳನ್ನೆಲ್ಲ ಹೇಳಿಕೊಳ್ಳುವುದು ಅಗತ್ಯವೇ? ಅದರಿಂದ ನೀವು ಬರೆಯಬಹುದಾದ ಉತ್ತಮ ಬರವಣಿಗೆಗೆ ತೊಡಕಾಗುವುದಿಲ್ಲವೇ? ಎಲ್ಲವನ್ನು ಹೇಳುವ ಆತುರಕ್ಕಿಂತ ಹೇಳಲೇಬೇಕಾದುದನ್ನು ಮಾತ್ರ ಹೇಳುವ ಸಾವಧಾನ ಒಳ್ಳೆಯದಲ್ಲವೇ?
* * * * *
 ಈ ಬ್ಲಾಗನ್ನು ಶುರುಮಾಡಿದಾಗ, "ಅಲಿಖಿತ' ಅನ್ನೋ ಒಂದು ಹೊಸ ಬ್ಲಾಗನ್ನು ಶುರುಮಾಡಿದ್ದೀನಿ..ನೋಡಿ ಹೇಗಿದೆ ಹೇಳಿ ಸರ್" ಅಂತ ಓ.ಎಲ್. ನಾಗಭೂಷಣಸ್ವಾಮಿ ಅವರಿಗೆ ಕೇಳಿದ್ದೆ. ಆಗ ಅತ್ತಲಿಂದ ಬಂದ ಮಾತಿದು. ಮೊದಮೊದಲಿಗೆ 'ಅಲಿಖಿತ'ದಲ್ಲಿ ನಾ ಬರೆದ ಬರಹಗಳೂ ಹಾಗಿದ್ದವು ಅನ್ನಿ. ಇನ್ನೂ ಎದೆಯೊಳಗೆ ಮಾಗಬೇಕಿದ್ದ, ಮತ್ತೇನೋ ಆಗಿ ನಂತರ ಹೊರಬರಬೇಕಿದ್ದ ಬರಹಗಳವು.
                                                                          * * * * *
"ನಮಸ್ತೆ ಸರ್..                 
ಖಂಡಿತ. ನನಗೂ ಆ ಅನುಮಾನ ಕಾಡಿದೆ. ಆದರೂ ಆ ಅನುಮಾನ ಕೇವಲ ಅನುಮಾನದ ಹಂತದಲ್ಲಿರುವ ಕಾರಣಕ್ಕೆ ಒಂದು ಪ್ರಯೋಗ ಅಂದುಕೊಂಡು ಇದನ್ನು ಶುರುಮಾಡಿದೆ. ನನ್ನ ಒಳ್ಳೆಯ ಬರವಣಿಗೆಯ ಸರಕನ್ನೂ ಇದು ಕದಿಯುತ್ತಿದೆ ಅನ್ನಿಸಿದ ದಿನವೇ 'ಅಲಿಖಿತ'ವನ್ನು ಬದಿಗೆ ಸರಿಸುತ್ತೇನೆ. ಆ ಕರಾರಿನ ಮೇರೆಗೇ ನನ್ನನ್ನು ನಾನು ಈ ಪ್ರಯೋಗಕ್ಕೆ ಒಪ್ಪಿಸಿಕೊಂಡಿದ್ದೇನೆ" ಅಂತ ಮಾತಾಡಿದ್ದೆ ಅವತ್ತು.
* * * * *
ಈ ಮಾತುಕಥೆಯಾಗಿ ಇಲ್ಲಿಗೆ ಸರಿಯಾಗಿ ಒಂದು ವರ್ಷ. ಆ ಕ್ಷಣ ಅನ್ನಿಸಿದ ಮಾತುಗಳನ್ನು ಎದೆಯೊಳಗಿಟ್ಟುಕೊಂಡು ಮಾಗಿದ ಭಾವ ಪಕಳೆಗಳನ್ನು ಮಾತ್ರ ಇಬ್ಬನಿಯಂಥ ಮನಸ್ಸುಗಳ ಓದಿನ ಸ್ಪರ್ಷಕ್ಕೆ ಒಪ್ಪಿಸುತ್ತಾ ಬರುತ್ತಿದ್ದೇನೆ. 'ಅಲಿಖಿತ' ತನ್ನ ಹೊಸ ರೂಪಿನಿಂದ ಹಲವರ ಮೆಚ್ಚುಗೆ ಗಳಿಸಿದೆ. ಹಲವು ವರ್ಷ ಕಾಡಿದ ನನ್ನ ನೋವಿಗೆ ಔಷಧಿ ಸಿಗುವಂತೆ ಮಾಡಿದೆ. ಆದರೂ ಓಎಲ್'ಎನ್ ಸರ್ ಹೇಳಿದ ಮಾತು ಮತ್ತು ಅದರ ಗುಟ್ಟನ್ನು ನಾನಿನ್ನೂ ಮರೆತಿಲ್ಲ. ಆ ಎಚ್ಚರದಲ್ಲೇ 'ಅಲಿಖಿತ'ಕ್ಕೆ ಜೀವ ತುಂಬುತ್ತಿದ್ದೇನೆ. ಫೇಸ್-ಬುಕ್'ನ ಅವಸರದ ಅಭಿವ್ಯಕ್ತಿಗೂ ನನ್ನ 'ಅಲಿಖಿತ'ದ ಬರಹಕ್ಕೂ ಇರುವ ತರತಮವನ್ನು ಕಂಡುಕೊಂಡಿದ್ದೇನೆ.



ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ